Mysore tatayya image

ಸಾಮಾಜಿಕ ಕಾರ್ಯ

ಶ್ರೀ ತಾತಯ್ಯ ನವರು ಸ್ಥಾಪಿಸಿದ, ಪ್ರೇರಣೆ ನೀಡಿ ಉದ್ಧರಿಸಿದ ಸಂಸ್ಥೆಗಳು

  • ಅನಾಥಾಲಯ(ರಿ), ಮೈಸೂರು
  • ಶಾರದಾವಿಲಾಸ ವಿದ್ಯಾಸಂಸ್ಥೆ,
  • ಮರಿಮಲ್ಲಪ್ಪ ವಿದ್ಯಾಸಂಸ್ಥೆಗಳು
  • ಸದ್ವಿದ್ಯಾ ಪಾಠಶಾಲೆ
  • ಮಹಾರಾಣಿ ವಿದ್ಯಾಸಂಸ್ಥೆ
  • ಪಂಚಮ ಕೈಗಾರಿಕಾ ಪಾಠಶಾಲೆ ಮತ್ತು ಎಜುಕೇಷನ್ ಲೀಗ್
  • ಇತರ ಸಾಮಾಜಿಕ ಸಂಸ್ಥೆಗಳು

ವೆಂಕಟಕೃಷ್ಣಯ್ಯನವರು ೧೮೯೬ ರಲ್ಲಿ ಅನಾಥ ಹಾಗೂ ಬಡಮಕ್ಕಳಿಗಾಗಿ ಸ್ಥಾಪಿಸಿದ 'ಅನಾಥಾಲಯ' ಸಾವಿರಾರು ಬಡಮಕ್ಕಳಿಗೆ ಅನ್ನ ಆಶ್ರಯ ನೀಡಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಅವರು ಪ್ರೇರಣೆ ನೀಡಿ ಕಟ್ಟಿ ಬೆಳೆಸಿದ ಮಹಾರಾಣಿ ಶಾಲೆ, ಮರಿಮಲ್ಲಪ್ಪ ಶಾಲೆ, ಸದ್ವಿದ್ಯಾ ಹಾಗೂ ಶಾರದಾವಿಲಾಸ ಶಾಲೆಗಳು ಇಂದು ನಾಡಿನ ಪ್ರಖ್ಯಾತ ವಿದ್ಯಾಸಂಸ್ಥೆಗಳಾಗಿವೆ. ಲಕ್ಷಾಂತರ ಜನರಿಗೆ ಅಕ್ಷರಜ್ಞಾನದ ಬೆಳಕು ನೀಡುತ್ತಿವೆ. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದನ್ನು ಬಹುತೇಕರು ವಿರೋಧಿಸುತ್ತಿದ್ದ ಕಾಲದಲ್ಲಿ ಸ್ವತಃ ತಾವೇ ಹೆಣ್ಣುಮಕ್ಕಳಿಗಾಗಿ ಶಾಲೆ ಆರಂಭಿಸಿದರು. ವಿಧವಾ ವಿವಾಹ ಏರ್ಪಡಿಸಿದರು. ವಿಧವೆಯರಿಗಾಗಿ ವೃತ್ತಿಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಮನೆ ತಪ್ಪಿದ, ತಬ್ಬಲಿ ಹೆಣ್ಣುಮಕ್ಕಳು ಪರಾಶ್ರಯಕ್ಕೆ ಬೀಳುವುದನ್ನು ತಪ್ಪಿಸಲು ಅವರಿಗಾಗಿ ಒಂದು ಉದ್ಯೋಗ ಕೇಂದ್ರವನ್ನು ಸ್ಥಾಪಿಸಿದರು. ಅಸ್ಪೃಶ್ಯರಿಗಾಗಿ ಶಾಲೆಗಳನ್ನು ಆರಂಭಿಸಿದರಲ್ಲದೆ ಅವರಿಗೆ ವೃತ್ತಿಶಿಕ್ಷಣವನ್ನು ಕಲಿಸುವ ಏರ್ಪಾಟು ಮಾಡಿದರು. ಗಾಂಧೀಜಿ ಹರಿಜನ ಸಮಸ್ಯೆಯನ್ನು ಕೈಗೆತ್ತಿಕೊಳ್ಳುವ ಎಷ್ಟೋ ಮೊದಲು ಹರಿಜನರಿಗಾಗಿ ಹಾಸ್ಟೆಲುಗಳನ್ನು ತಾವೇ ತೆರೆದು ಮೈಸೂರು ಸಂಸ್ಥಾನದ ನಾನಾ ಕಡೆ ಅವರಿಗಾಗಿ ವೃತ್ತಿ ಶಿಕ್ಷಣ ಶಾಲೆಗಳನ್ನು ಸರ್ಕಾರದಿಂದ ತೆರೆಸಿದ ಕೀರ್ತಿ ಅವರದು.ಅಶಕ್ತ ಪ್ರ್ರಾಣಿಗಳಿಗಾಗಿ ಪಿಂಜರಾಪೋಲನ್ನು ಸ್ಥಾಪಿಸಲು ನೆರವಾದರು. ಶ್ರೀ ತಾತಯ್ಯ ನವರು ಸ್ಥಾಪಿಸಿದ, ಪ್ರೇರಣೆ ನೀಡಿ ಉದ್ಧರಿಸಿದ ಹಲವು ಸಂಸ್ಥೆಗಳು ಶತಮಾನೋತ್ಸವದ ಸಂಭ್ರಮವನ್ನು ಕಂಡು ಇಂದಿಗೂ ನಾಡಿನ ಪ್ರಖ್ಯಾತ ಸಂಸ್ಥೆಗಳಾಗಿ ಜನಮನ್ನಣೆ ಗಳಿಸಿವೆ.

ಅನಾಥಾಲಯ(ರಿ), ಮೈಸೂರು

ಕಳೆದ ೧೨೦ ವರ್ಷಗಳಿಂದ ಅನಾಥ ವಿದ್ಯಾರ್ಥಿಗಳನ್ನು ಪೋಷಿಸಿ ಇಂದಿಗೂ 'ತಾತಯ್ಯನವರ ಅನಾಥಾಲಯ'ವೆಂದೇ ಖ್ಯಾತವಾಗಿರುವ ಮೈಸೂರು ಅನಾಥಾಲಯ ಅವರ ತ್ಯಾಗಕ್ಕೆ ಒಂದು ಜೀವಂತ ಸ್ಮಾರಕ. ವೆಂಕಟಕೃಷ್ಣಯ್ಯನವರು ೧೮೯೬ ರಲ್ಲಿ ಅನಾಥ ಹಾಗೂ ಬಡಮಕ್ಕಳಿಗಾಗಿ ಸ್ಥಾಪಿಸಿದ 'ಅನಾಥಾಲಯ' ಸಾವಿರಾರು ಬಡಮಕ್ಕಳಿಗೆ ಅನ್ನ ಆಶ್ರಯ ನೀಡಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.

ಅನಾಥಾಲಯ ಪ್ರಾರಂಭವಾದದ್ದು ಒಂದು ವಿಶಿಷ್ಟ ಸನ್ನಿವೇಶದಲ್ಲಿ. ಶ್ರೀ ಶೇಷಾದ್ರಿ ಐಯರ್ರವರ ಕಟ್ಟಡದ ಪೂರ್ವ ಬಾಗಕ್ಕಿರುವ ಕೃಷ್ಣವಿಲಾಸ ಅಗ್ರಹಾರದಲ್ಲಿ ನಂಜುಂಡಪ್ಪನೆಂಬುವರ ನಿರಂಜನ ಮಠವಿತ್ತು. ಅವರು ತಮ್ಮ ಅವಸಾನ ಕಾಲದಲ್ಲಿ ಈ ಮಠವನ್ನು ಸ್ವಾಮಿ ವಿಶ್ವೇಶ್ವರಾನಂದ ಸರಸ್ವತಿ ಎಂಬ ಯತಿಗಳಿಗೆ ವಹಿಸಿಕೊಟ್ಟರು . ಈ ಸ್ವಾಮಿಗಳು ಕೆಲವು ಅನಾಥ ಮಕ್ಕಳಿಗೆ ಅನ್ನ ವಸತಿಗಳನ್ನಿತ್ತು ಸಹಾಯ ಮಾಡುತ್ತಿದ್ದರು. ಸ್ವಾಮಿಗಳು ೧೮೯೬ ರಲ್ಲಿ ದಿ || ಶ್ರೀ ವೆಂಕಟಕೃಷ್ಣಯ್ಯನವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಮಠದ ಜವಾಬ್ದಾರಿಯನ್ನು ಸಮಿತಿಗೆ ಹಸ್ತಾಂತರಿಸಿದರು. ಈ ಸಮಿತಿಯ ಸದಸ್ಯರು ಸರ್ಕಾರ ಮತ್ತು ಸಾರ್ವ ಜನಿಕರ ಸಹಾಯದೊಂದಿಗೆ ಮಠದಲ್ಲೇ ಒಂದು ಅನಾಥಾಲಯವನ್ನು ಸ್ಥಾಪಿಸಿದರು . ಆದರೆ ಅರ್ಥಿಕ ಸಮಸ್ಯೆ ಯಿಂದ ಬಳಲುತ್ತಿದ್ದ ಸಂಸ್ಥೆಗೆ ಶಾಶ್ವತವಾಗಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಿಧಿಯನ್ನು ಸಂಗ್ರಹಿಸುವ ಉದ್ದೇಶದಿಂದ ಉತ್ತರ ಭಾರತ ಯಾತ್ರೆಯನ್ನು ಕೈಗೊಂಡ ಸ್ವಾಮಿಗಳು ಮಾರ್ಗಮದ್ಯದಲ್ಲೇ ನಿಧನರಾದ್ದರಿಂದ ಸಂಸ್ಥೆಯನ್ನು ನಡೆಸಿಕೊಂಡು ಹೋಗುವ ಸಂಪೂರ್ಣ ಜವಾಬ್ದಾರಿ ಶ್ರೀ ವೆಂಕಟ ಕೃಷ್ಣಯ್ಯ ಅವರದ್ದಾಯಿತು .

ಮನೆ ,ಮನೆ ಬಾಗಿಲಿಗೆ ಅಲೆದು ಹಣವೋ, ಅಕ್ಕಿಯೋ, ಉಪ್ಪೋ, ಎಣ್ಣೆ ಯೋ ಕೊಟ್ಟುದನ್ನು ಸಂಗ್ರಹಿಸಿ ಕೊಂಡು ಬಂದು ಅವರು ಸಂಸ್ಥೆಯನ್ನು ಮುನ್ನೆಡೆಸಿದರು. ತಾತಯ್ಯನವರು ಎಂದೇ ಎಲ್ಲರಿಂದ ಕರೆಸಿಕೊಳ್ಳುತ್ತಿದ್ದ ವೆಂಕಟಕೃಷ್ಣಯ್ಯನವರು ನಗರದ ಪ್ರತಿಯೊಂದು ಮೋಹಲ್ಲದಲ್ಲೂ ಸುತ್ತಿ ಅಲ್ಲಿನ ಎಲ್ಲ ಮತೀಯ ಮುಖಂಡರನ್ನು ಸೇರಿಸಿ ಸ್ಥಳೀಯ ಉಪಸಮಿತಿ ಗಳನ್ನು ರಚಿಸಿ ಅವರು ಅನಾಥಾಲಯಕ್ಕೆ ಸಹಾಯ ಸಹಕಾರ ಒದಗಿಸಿ ಕೊಡುವಂತೆ ವ್ಯವಸ್ಥೆ ಮಾಡಿದರು. ೧೯೧೫ರ ವೇಳೆಗೆ ೫೨ ಬಾಲಕರನ್ನು ಹೊಂದಿದ್ದ ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಅವರ ಶಾಲಾ ವಿದ್ಯಾಬ್ಯಾಸದ ಜೊತೆಗೆ ಮರಗೆಲಸ, ಹೊಲಿಗೆ, ಚಾಪೆ ಹೆಣೆಯುವದು ಮೊದಲಾದ ಜೀವನೋಪಯೋಗಿ ಕೈ ಕಸುಬುಗಳನ್ನು ಉಚಿತವಾಗಿ ಕಲಿಸಿಕೊಡುತ್ತಿತ್ತು. ಇದೇ ಸಮಯದಲ್ಲಿ ಮೈಸೂರು ಸರ್ಕಾರದವರು ಬಾಲಿಕಾ ಪಾಠ ಶಾಲೆಗಾಗಿ, ಅನಾಥಾಲಯ ನಡೆಯುತ್ತಿದ್ದ ಕಟ್ಟಡವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅದಕ್ಕೆ ಬದಲಾಗಿ ಇಂದು ಅನಾಥಾಲಯವಿರುವ ವಿಸ್ತಾರವಾದ ನಿವೇಶನವನ್ನೂ, ಕಟ್ಟಡವನ್ನು ಕಟ್ಟಿಸುವದಕ್ಕಾಗಿ ೪೪೬೦ ರೂ.ಗಳನ್ನೂ ನೀಡಿದರು .ಆದರೆ ತಾತಯ್ಯನವರ ವಿಶಾಲ ಮನಸ್ಸಿಗೆ ಇದು ಎಷ್ಟೂ ಸಾಲದಾಗಿ ಕಾಣಿಸಿತ. ಅವರೇ ಸ್ವತಹ ಓಡಾಡಿ ೨೫೦೦೦ ರೂ, ಗಳನ್ನು ಸಂಗ್ರಹಿಸಿ ತಾವೇ ನಿಂತು ವಿದ್ಯಾರ್ಥಿ ನಿಲಯವನ್ನು ಕಟ್ಟಿಸಿದರು. ಅನಾಥಾಲಯಕ್ಕೆ ಸಂಬಂದಿಸಿದ ಪ್ರತಿಯೊಂದೂ ಜವಾಬ್ದಾರಿಯನ್ನೂ ವೈಯಕ್ತಿಕ ಪ್ರೀತಿ ಕಾಳಜಿಗಳೊಂದಿಗೆ ನಿರ್ವಹಿಸುತ್ತಿದ್ದ ತಾತಯ್ಯನವರು ೧೯೩೩ ನೇ ನವೆಂಬರ್ ೮ರಂದು ಇಹಲೋಕವನ್ನು ತ್ಯಜಿಸುವ ಕಟ್ಟ ಕಡೆಯ ಗಳಿಗೆಯಲ್ಲಿ ಕೂಡ ಅನಾಥಾಲಯದ ಶ್ರೇಯಸ್ಸಿಗಾಗಿ ಪ್ರಯತ್ನಿಸುತ್ತಿದ್ದರು. ಅವರ ನಿಧನದ ನಂತರ ಸಂಸ್ಥೆಗೆ ಸಿಡಿಲು ಬಡಿದಂತಾದರೂ ಅವರ ಅಮೃತ ಹಸ್ತದಲ್ಲಿ ಸ್ಥಾಪಿಸಿದ ಸಂಸ್ಥೆ, ಅವರ ಆಶೀರ್ವಾದ ಬಲದಿಂದ ಇಂದಿಗೂ ಕುಂದಿಲ್ಲದೆ ನಡೆದುಕೊಂಡು ಬರುತ್ತಿದೆ.

ಸುದ್ದಿ ಹಾಗೂ ಕಾರ್ಯಕ್ರಮಗಳು

ಕಾರ್ಯಕ್ರಮ :
ತಾತಯ್ಯ ನವರ ಜನ್ಮದಿನಾಚರಣೆ ಹಾಗೂ ವೆಬ್ ಸೈಟ್ ಲೋಕಾರ್ಪಣೆ : ಸೆಪ್ಟೆಂಬರ್ ೧೧, ೨೦೧೧ , ಶಾರದಾವಿಲಾಸ ಸಭಾಂಗಣ , ಮೈಸೂರು ಮುಂದೆ ಓದಿ

ಗ್ಯಾಲರಿ

Mysore Thathayya Gallery

ಶ್ರೀ ವೆಂಕಟ ಕೃಷ್ಣಯ್ಯ ನವರ ಸಾರ್ವಜನಿಕ ಸೇವೆ ಹಾಗೂ ಅಸ್ಪೃಶ್ಯತಾ ನಿವಾರಣೆ ಮತ್ತು ದೀನ ದಲಿತರ ಬಗೆಗಿನ ಅವರ ಕಾಳಜಿಯ ಪ್ರಯತ್ನಗಳು ನನ್ನ ಮನಸ್ಸು ಗೆದ್ದಿವೆ . ನಾನು ಅವರನ್ನು 'ಮೈಸೂರಿನ ಭೀಷ್ಮ ' ನೆಂದು ಪ್ರಶಂಸಿಸುವೆ . ಮೈಸೂರಿನ ಜನತೆಯಲ್ಲಿ ಅವರು 'Grand old man of Mysore' ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ .

– ಮಹಾತ್ಮಾ ಗಾಂಧಿ

ಶುದ್ಧ, ನಿಷ್ಕಳಂಕ ಜೀವನ ಹಾಗೂ ಸಾಮಾಜಿಕ ಸೇವೆಗೆ ಪ್ರಸಿದ್ಧರಾಗಿರುವ ಶ್ರೀ ವೆಂಕಟಕೃಷ್ಣಯ್ಯ ನವರು ಮೈಸೂರು ಪ್ರಾಂತ್ಯದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ನಿಸ್ವಾರ್ಥವಾಗಿ ದುಡಿದಿದ್ದಾರೆ. ಅವರ ಸರಳತೆ ಹಾಗೂ ಸಾಮಾಜಿಕ ಕಾಳಜಿಯ ಕಾರಣದಿಂದ ಮೈಸೂರಿನ ಜನತೆ ಅವರನ್ನು 'ತಾತಯ್ಯ' ಎಂದು ಪ್ರೀತಿಯಿಂದ ಕರೆದು ಗೌರವಿಸಿದೆ.

– ದಿವಂಗತ ಶ್ರೀ ಚಾಮರಾಜ ಒಡೆಯರ್, ಮೈಸೂರಿನ ಮಹಾರಾಜರು

ಜನತೆಯ ಹಿತಕ್ಕಾಗಿ ಜೀವಾವಧಿ ಸೇವೆ ಮಾಡಿರುವ ವೆಂಕಟಕೃಷ್ಣಯ್ಯನವರ ದೇಶಾಭಿಮಾನ, ಸಾರ್ವಜನಿಕ ಸೇವಾವೃತ್ತಿ ಮತ್ತು ಸ್ವಾರ್ಥತ್ಯಾಗ ಇವುಗಳ ಬಗ್ಗೆ ಗೌರವ ಅಭಿಮಾನವನ್ನು ಹೊಂದಿರುವವರ ಪೈಕಿ ನಾನು ಯಾರಿಗೂ ಹಿಂದಿಲ್ಲ. ಮೈಸೂರಿನಲ್ಲಿ ನನ್ನ ಅಧಿಕಾರ ಸೇವಾವಧಿಯಲ್ಲಿ ಅವರು ನನಗೆ ಇತ್ತ ಬೆಂಬಲದ ಕೃತಜ್ಞತಾಪೂರ್ವಕ ನೆನಪುಗಳು ನನ್ನಲ್ಲಿ ಎಂದಿಗೂ ಉಳಿಯುವುವು.

– ಎಂ. ವಿಶ್ವೇಶ್ವರಯ್ಯನವರು :

ಮೈಸೂರಿನ ಜನತೆಯಲ್ಲಿ ಸ್ವಾತಂತ್ರ್ಯದ ಬಗೆಗಿನ ಜಾಗೃತಿ ಹಾಗೂ ಸಾಮಾಜಿಕ ಅರಿವು ಮೂಡಿಸುವಲ್ಲಿ ಶ್ರೀ ವೆಂಕಟಕೃಷ್ಣಯ್ಯನವರ ಪಾತ್ರ ಅತ್ಯಂತ ಮಹತ್ವಪೂರ್ಣವಾದುದು. ಮೈಸೂರು ಪ್ರಾಂತ್ಯದ ಸಾಮಾಜಿಕ ಹಾಗೂ ಅರ್ಥಿಕ ಬೆಳವಣಿಗೆಗೆ ಅವರು ಅವಿಶ್ರಾಂತವಾಗಿ ದುಡಿದವರು.

– ಶ್ರೀ ವಿ.ವಿ. ಗಿರಿ, ಭಾರತದ ಮಾಜಿ ರಾಷ್ಟ್ರಪತಿಗಳು

The Anathalaya website